ಸುರಪುರ: ತಾಲೂಕಿನ ದೇವಿಕೇರಾ ಗ್ರಾಮದಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾ.ಪಂ ಇಓ ಬಸವರಾಜ ಸಜ್ಜನ್ ಮಾತನಾಡಿ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಹಾಗೂ ಸುರಕ್ಷಾ ಭೀಮಾ ಯೋಜನೆಗಳಿಂದ ಪ್ರತಿಯೊಬ್ಬರಿಗೂ ಭದ್ರತೆ ಲಭಿಸಲಿದೆ ಎಂದರು.ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯಿಂದ ಸರ್ಕಾರವು ನಾಗರಿಕರ ಭವಿಷ್ಯದ ಭದ್ರತೆಗೆ ಒತ್ತು ನೀಡಿ ೨೦೧೫ರಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಗೆ ಚಾಲನೆ ನೀಡಿದ್ದಾರೆ. ೧೮ ರಿಂದ ೫೦ ವರ್ಷದೊಳಗಿನ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಗೆ ಸೇರ್ಪಡೆಗೊಂಡು ವರ್ಷಕ್ಕೆ ಕೇವಲ ೪೩೬ ರೂಪಾಯಿ ಪಾವತಿಸಿದರೆ, ಸಾವಿನ ನಂತರ ಕುಟುಂಬಕ್ಕೆ ೨ ಲಕ್ಷ ರೂಪಾಯಿ ದೊರೆಯಲಿದೆ.
ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಈ ಯೋಜನೆಯು ಅಕಾಲಿಕ ಅಪಘಾತ ಹಾಗೂ ಅಂಗವೈಕಲ್ಯ ಸಂದರ್ಭದಲ್ಲಿ ಸಹಾಯ ನೀಡುವ ಉದ್ದೇಶ ಹೊಂದಿದೆ. ೧೮ ರಿಂದ ೭೦ ವರ್ಷದೊಳಗಿನ ನಾಗರಿಕರು ವರ್ಷಕ್ಕೆ ಕೇವಲ ೨೦ ಪ್ರೀಮಿಯಂ ಪಾವತಿಸಿ ಸದಸ್ಯರಾಗಬಹುದು. ಅಪಘಾತದಿಂದ ಸಾವಾದಲ್ಲಿ ಅಥವಾ ಸಂಪೂರ್ಣ ಶಾಶ್ವತ ಅಂಗವೈಕಲ್ಯ ಉಂಟಾದಲ್ಲಿ ೨ ಲಕ್ಷ, ಭಾಗಶಃ ಅಂಗವೈಕಲ್ಯ ಉಂಟಾದಲ್ಲಿ ೧ ಲಕ್ಷ ರೂಪಾಯಿಗಳ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಎರಡೂ ಯೋಜನೆಗಳು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ತುಂಬಾ ಉಪಯುಕ್ತವಾಗಿವೆ.ನಿಮ್ಮ ಬ್ಯಾಂಕ್ ಖಾತೆ ಮೂಲಕ ನೇರವಾಗಿ ಕಂತು ಹಣ ಪಾವತಿ ಆಗುವುದರಿಂದ ಗ್ರಾಮೀಣ ಪ್ರದೇಶಗಳಿಗೂ ಸುಲಭವಾಗಿ ತಲುಪುತ್ತಿವೆ. ಲಕ್ಷಾಂತರ ನಾಗರಿಕರು ಈಗಾಗಲೇ ಇದರ ಫಲಾನುಭವಿಗಳಾಗಿದ್ದಾರೆ.
ಪ್ರಧಾನ ಮಂತ್ರಿ ಜೀವನ ಜ್ಯೋತಿ ಹಾಗೂ ಸುರಕ್ಷಾ ಭೀಮಾ ಯೋಜನೆಗಳು ಸಾಮಾನ್ಯ ಜನರಿಗೆ ಕನಿಷ್ಠ ವೆಚ್ಚದಲ್ಲಿ ಗರಿಷ್ಠ ಭದ್ರತೆ ಒದಗಿಸುವ ಉದ್ದೇಶ ಹೊಂದಿದ್ದು, ಪ್ರತಿಯೊಬ್ಬರೂ ಈ ಯೋಜನೆಗಳಲ್ಲಿ ಸೇರಿ ತಮ್ಮ ಕುಟುಂಬಕ್ಕೆ ಭದ್ರತೆ ಮಾಡಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಪಿಡಿಓ ಚಂದಪ್ಪ ನಾಯಕ, ತಾಂತ್ರಿಕ ಸಂಯೋಜಕ ಶಿವಯೋಗಿ,ಐಸಿಸಿ ಸಂಯೋಜಕ ಮಲ್ಲಿಕಾರ್ಜುನ, ಸವಿತಾ, ತಾಂತ್ರಿಕ ಸಹಾಯಕ ಶ್ರೀನಿವಾಸ್ ನಾಯಕ ಸೇರಿದಂತೆ ಅನೇಕರು ಭಾಗವಹಿಸಿದ್ದರು.


